1. ಅಗ್ರಿಪಿಡಿಯಾ

ಕೃಷಿಯಲ್ಲಿ ಸಂಪನ್ಮೂಲಗಳ ಸಂರಕ್ಷಣೆಗಳಿಗೆ ಸಹಾಯ ಮಾಡುವ ವಿಭಿನ್ನ ತಂತ್ರಜ್ಞಾನಗಳ ಮಾಹಿತಿ

Agri equipments

ನಮ್ಮ ಭೂಸಂಪನ್ಮೂಲಗಳನ್ನು ಬಳಸಿಕೊಳ್ಳುವ ಮೂಲಕ ಮಾನವ ಸಮಾಜವು ಅಭಿವೃದ್ದಿಗೊಂಡಿದೆ. ವಿವಿಧ ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು, ನೀರು ಮತ್ತು ಗಾಳಿಯು ಸಸ್ಯಗಳ ಬೆಳವಣಿಗೆಗೆ ಬೇಕಾಗಿರುವ ಅತೀ ಪ್ರಮುಖ ಅಂಶಗಳಾಗಿವೆ. ವಿಶ್ವದ ಜನಸಂಖ್ಯೆಯು ಅಪಾಯಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿರುವುದರಿಂದ ನೈಸರ್ಗಿಕ ಸಂಪನ್ಮೂಲಗಳ ಬಳಕೆಯೂ ಹೆಚ್ಚುತ್ತಿದೆ. ಆದ್ದರಿಂದ, ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳಲು ಮತ್ತು ಭವಿಷ್ಯದ ಪೀಳಿಗೆಯನ್ನು ಉಳಿಸಲು ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವುದು ಬಹಳ ಅಗತ್ಯವಾಗಿದೆ. ಕೃಷಿಯಲ್ಲಿ ಸಂಪನ್ಮೂಲಗಳ ಸಂರಕ್ಷಣೆಗಳಿಗೆ ಸಹಾಯ ಮಾಡುವ ವಿಭಿನ್ನ ತಂತ್ರಜ್ಞಾನಗಳಿದ್ದು ಅವುಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.

ಕ್ರ.ಸಂ.

ತಂತ್ರಜ್ಞಾನಗಳು/ಯಂತ್ರಗಳು

ಸಂರಕ್ಷಿಸಬಹುದಾದ ಸಂಪನ್ಮೂಲಗಳು

1

ಏರುಮಡಿ ನಾಟಿ/ಬಿತ್ತನೆ

ನೀರು

2

ಬೆಳೆ ಉಳಿಕೆ/ತ್ಯಾಜ್ಯ ನಿರ್ವಹಣೆ

ಮಣ್ಣಿನ ಗುಣಮಟ್ಟ

3

ಲೇಸರ್ ಆಧಾರಿತ ಭೂಮಿ ಸಮತಟ್ಟು ಮಾಡುವ ಯಂತ್ರ

ನೀರು

4

ಹನಿ ನೀರಾವರಿ

ನೀರು

5

ನೇರ ಭತ್ತ ಬಿತ್ತನೆ (ಕೆಸರು ಗದ್ದೆ ಮಾಡದೇ)

ಮಣ್ಣಿನ ಗುಣಮಟ್ಟ, ಗಾಳಿ

6

ಡ್ರಮ್ ಸೀಡರ್ ಮುಖಾಂತರ ಕೆಸರು ಗದ್ದೆಯಲ್ಲಿ ನೇರ ಭತ್ತ ಬಿತ್ತನೆ 

ನೀರು, ಮಾನವಶಕ್ತಿ

7

ಶೂನ್ಯ ಉಳುಮೆ ಪದ್ದತಿಯಲ್ಲಿ ಭತ್ತದ ನೇರ ಬಿತ್ತನೆ

ನೀರು, ಮಾನವಶಕ್ತಿ

8

ಸಮಗ್ರ ಕೃಷಿ ಪದ್ದತಿ

ಮಣ್ಣಿನ ಗುಣಮಟ್ಟ, ನೀರು

9

ಸೌರ ಪಂಪುಗಳು

ನೀರು, ಶಕ್ತಿ

10

ಜೈವಿಕ ಅನಿಲ ಸ್ಥಾವರ

ಇಂದನ

11

‘ಸ್ರಿ’ ಪದ್ದತಿಯಲ್ಲಿ ಭತ್ತ ಬೆಳೆೆಯುವುದು

ನೀರು

12

ಬೆಳೆ ವೈವಿಧ್ಯಿಕರಣ         ಮಣ್ಣಿನ ಗುಣಮಟ್ಟ

ನೀರು

13

ಕಡಿಮೆ/ಕನಿಷ್ಟ ಬೇಸಾಯ   ಮಣ್ಣಿನ ಗುಣಮಟ್ಟ

ನೀರು

14

ಬೆಳೆಉಳಿಕೆ/ರವದೆ/ಕೃಷಿ ತ್ಯಾಜ್ಯ ಹೊದಿಕೆ

ಮಣ್ಣಿನ ಗುಣಮಟ್ಟ, ನೀರು

 

ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣಾ ತಂತ್ರಜ್ಞಾನಗಳನ್ನು ಸಂಕ್ಷಿಪ್ತವಾಗಿ ಈ ಕೆಳಗಿನಂತೆ ವಿವರಿಸಲಾಗಿದೆ :

  1. ಲೇಸರ್ ಆಧಾರಿತ ಭೂಮಿ ಸಮತಟ್ಟು ಮಾಡುವ ಯಂತ್ರ :

ನೀರಾವರಿ ಮತ್ತು ಮಳೆಯಾಶ್ರಿತ ಕೃಷಿಯಲ್ಲಿ ನಿಖರವಾದ ರೀತಿಯಲ್ಲಿ ಭೂಮಿಯನ್ನು ಸಮತಟ್ಟು ಮಾಡುವುದರಿಂದ ಸಮ ಪ್ರಮಾಣದಲ್ಲಿ ನೀರಾವರಿ ಮಾಡಬಹುದು ಹಾಗೆಯೇ, ಬೀಜದ ಮೊಳಕೆಗಳನ್ನು ಹಲವಾರು ನೈಸರ್ಗಿಕ ಒತ್ತಡದಿಂದ ಕಾಪಾಡುವುದರೊಂದಿಗೆ ಅವುಗಳನ್ನು ಸದೃಢವಾಗಿಸಬಹುದು. ಇತ್ತೀಚಿನ ದಿನಗಳಲ್ಲಿ ಲೇಸರ್ ನಿಯಂತ್ರಿತ ತಂತ್ರಜ್ಞಾನವು, ಭೂಮಿಯನ್ನು ಸಮ ಮಾಡುವುದಕ್ಕಿರುವ ಒಂದು ಉತ್ತಮ ವಿಧಾನವಾಗಿದೆ. ಈ ವ್ಯವಸ್ಥೆಯು 700 ಮೀಟರವರೆಗೆ ಸಂಪೂರ್ಣವಾಗಿ ಸರಳ ರೇಖೆಯಲ್ಲಿ ಚಲಿಸುತ್ತಾ ಅತಿಗೆಂಪು ((Infrared ಕಿರಣವನ್ನು ಹೊರಸೂಸುವಂತಹ ಲೇಜರ್ ಹರಡುವ ಘಟಕವನ್ನು ಒಳಗೊಂಡಿರುತ್ತದೆ. ಈ ಯಂತ್ರದ ಎರಡನೇ ಭಾಗವು ರಿಸೀವರ್ ಆಗಿದ್ದು, ಇದು ಅತಿಗೆಂಪು ಕಿರಣವನ್ನು ಗ್ರಹಿಸಿ ಅದನ್ನು ವಿದ್ಯುತ್ ಸಂಕೇತವನ್ನಾಗಿ ಪರಿವರ್ತಿಸುತ್ತದೆ.

ವಿದ್ಯುತ್ತ್  ಹೈಡ್ರಾಲಿಕ್ ಕವಾಟವನ್ನು ಸಕ್ರಿಯಗೊಳಿಸಲು ನಿಯಂತ್ರಣ ಪೆಟ್ಟಿಗೆಯಿಂದ ವಿದ್ಯುತ್ ಸಂಕೇತವನ್ನು ನಿರ್ದೇಸಿಸಲಾಗುತ್ತದೆ. ಈ ಹೈಡ್ರಾಲಿಕ್ ಕವಾಟವು ಅತಿಗೆಂಪು ಕಿರಣವನ್ನು ಅನುಸರಿಸಿ ಭೂಮಿ ಸಮತಟ್ಟು ಮಾಡುವ ಉಪಕರಣದ ಬ್ಲೇಡಿನ ಸ್ಥಾನವನ್ನು ಭೂಮಟ್ಟಕ್ಕನುಗುಣವಾಗಿ ನಿಯಂತ್ರಿಸುತ್ತದೆ. ಯಂತ್ರದ ಸ್ವೀಕರಿಸುವ ವ್ಯವಸ್ಥೆಯು ಅತಿಗೆಂಪು ಕಿರಣವನ್ನು ಗ್ರಹಿಸುತ್ತಾ ಸರಿಯಾದ ದರ್ಜೆಯಲ್ಲಿ ಸ್ವಯಂಚಾಲಿತವಾಗಿ ಭೂಮಿಯನ್ನು ಸಮ ಮಾಡುವುದಕ್ಕೆ ಮಾರ್ಗದರ್ಶಿಸುತ್ತದೆ.

  1. ಬೀಜ ಬಿತ್ತನೆ/ಬೀಜ ಹಾಗೂ ರಸಗೊಬ್ಬರ ಬಿತ್ತನೆ ಯಂತ್ರ:

ಈ ಯಂತ್ರದ ಪ್ರಮುಖ ಕಾರ್ಯವೇನೆಂದರೆ, ಸಣ್ಣ ಸಾಲುಗಳನ್ನು ಮಾಡುವುದರ ಜೊತೆಗೆ ಆ ಸಾಲುಗಳಲ್ಲಿ ಬೀಜ ಮತ್ತು ರಸಗೊಬ್ಬರ ಬಿತ್ತನೆ ಮಾಡಿ ನಂತರ ಮಣ್ಣಿನಿಂದ ಮುಚ್ಚುವುದು. ಈ ಯಂತ್ರವು ಉಳುಮೆ ಮಾಡಿದ ಭೂಮಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಹರಡುವ ಪದ್ದತಿಗೆ ಹೋಲಿಸಿದರೆ, ಈ ಯಂತ್ರದ ಸಹಾಯದಿಂದ ಪ್ರತಿಶತ 20-25 ರಷ್ಟು ಬಿತ್ತನೆ ಬೀಜವನ್ನು ಉಳಿತಾಯ ಮಾಡಬಹುದು. ಬೀಜ ಹಾಗೂ ರಸಗೊಬ್ಬರ ಬಿತ್ತುವ ಯಂತ್ರವು ಎರಡು ಪ್ರತ್ಯೇಕ ಪೆಟ್ಟಿಗೆಗಳನ್ನು ಹೊಂದಿದ್ದು, ಬೀಜ ಮತ್ತು ಗೊಬ್ಬರವನ್ನು ಸರಿಯಾದ ಪ್ರಮಾಣದಲ್ಲಿ ಬಿತ್ತನೆ ಮಾಡುತ್ತದೆ. ಆದ್ದರಿಂದ, ಈ ಯಂತ್ರವನ್ನು ಬಳಸುವುದರಿಂದ ಬೀಜ ಹಾಗೂ ರಸಗೊಬ್ಬರದ ಜೊತೆಗೆ ಇಂಧನ ಮತ್ತು ಸಮಯವನ್ನು ಉಳಿಸಬಹುದಾಗಿದೆ.

  1. ಶೂನ್ಯ ಉಳುಮೆ ಮಾದರಿಯ ಬಿತ್ತನೆ ಯಂತ್ರ:

ಈ ಯಂತ್ರವು ತಲೆಕೆಳಗಾದ “T” ಆಕಾರದ ಸಾಲುಗಳನ್ನು ಮಾಡುವ ಸಾಧನವನ್ನು ಹೊಂದಿರುವ ವಿಶೇಷ ಬಿತ್ತನೆಯ ಯಂತ್ರೋಪಕರಣವಾಗಿದೆ. ಇದು ಮಣ್ಣಿನಲ್ಲಿ ಕಿರಿದಾದ ಮತ್ತು ಸೀಳು ಮಾದರಿಯ ಸಾಲನ್ನು ತೆರೆದು ಅದರಲ್ಲಿ ಬೀಜಗಳನ್ನು ಇರಿಸುತ್ತದೆ. ಈ ಉಪಕರಣವು ಶೂನ್ಯ ಬೇಸಾಯದ ಮಾದರಿಯಲ್ಲಿ ಬಿತ್ತನೆ ಮಾಡುವುದರಿಂದ, ಉಳುಮೆ ಅಗತ್ಯತೆಯನ್ನು ಕಡಿತಗೊಳಿಸುತ್ತದೆ ಹಾಗೂ ಬಿತ್ತನೆಯನ್ನು ಸಮಯಕ್ಕನುಗುಣವಾಗಿ ಮಾಡುವುದರ ಜೊತೆಗೆ ಮಣ್ಣು, ಇಂಧನ, ನೀರು, ಗೊಬ್ಬರ ಮತ್ತು ಕಳೆನಾಶಕಗಳನ್ನು ಉಳಿಸುವ ಮೂಲಕ ವೆಚ್ಚವನ್ನು ಕಡಿತಗೊಳಿಸಿ ಇಳುವರಿಯನ್ನು ಹೆಚ್ಚಿಸುತ್ತದೆ.

  1. ಹ್ಯಾಪಿಸೀಡರ್ (Happyseeder):

ಈ ‘ಹ್ಯಾಪಿಸೀಡರ್’ ತಂತ್ರಜ್ಞಾನವನವು ಬೆಳೆ ಉಳಿಕೆ/ರವದಿಯುತ ಭೂಮಿಯಲ್ಲಿ ನೇರ ಬಿತ್ತನೆ ಹಂತದಲ್ಲಿ ಬರುವ ಸಮಸ್ಯೆಗೆಗಳನ್ನು ನೀಗಿಸಿ ಬಿತ್ತನೆ ಮಾಡುವಲ್ಲಿ ಸಹಕಾರಿಯಾಗುತ್ತದೆ. ಈ ಯಂತ್ರದ ಸಹಾಯದಿಂದ ಬೆಳೆ ಉಳಿಕೆ/ರವದಿಯನ್ನು ಹೊಲದ ಮೇಲ್ಮೈಯಲ್ಲಿ ಹೊದಿಕೆಯಾಗಿ ಉಳಿಸಿ ಬೀಜವನ್ನು ಮಾತ್ರ ಸಾಲಿನಲ್ಲಿ ಬಿತ್ತನೆ ಮಾಡಬಹುದಾಗಿದೆ. ಈ ಯಂತ್ರದಲ್ಲಿ, ಪ್ಲೇಲ್ ಬಗೆಯ ಬ್ಲೇಡುಗಳನ್ನು ರವದಿ ನಿರ್ವಹಣೆಗಾಗಿ ರೋಟಾರ್‌ಗಳ ಮೆಲೆ ಅಳವಡಿಸಲಾಗಿದ್ದು, ಇವು ಭೂಮಿಯ ಮೇಲೆ ನಿಂತಿರುವ ರವದೆ/ಬೆಳೆ ಉಳಿಕೆಗಳನ್ನು ಕತ್ತರಿಸುತ್ತವೆ. ಇದರಿಂದಾಗಿ, ಬಿತ್ತನೆ ಸಮಯದಲ್ಲಿ ಬೆಳಉಳಿಕೆ/ರವದೆಯು ಯಂತ್ರದ ಕುಳದ ಮುಂಬಾಗದಲ್ಲಿ ಬರುವುದನ್ನು ತಪ್ಪಿಸಿ ಸರಿಯಾಗಿ ಬಿತ್ತನೆ ಆಗುತ್ತದೆ. ರೋಟಾರ್‌ನ ಬ್ಲೇಡುಗಳು ಒಣ ರವದೆ/ಹುಲ್ಲು/ಬೆಳೆ ಉಳಿಕೆಗಳನ್ನು ಎರಡು ಸಾಲುಗಳ ಮದ್ಯ ಬಾಗಕ್ಕೆ ತಳ್ಳುತ್ತವೆ. ಈ ಪ್ರಕ್ರಿಯೆಯಿಂದ ಮಣ್ಣಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ತದನಂತರ, ರವದೆಯು ಯಂತ್ರದ ಹಿಂಬಾಗದಲ್ಲಿ ಬೂಮಿಯ ಮೇಲ್ಮೆöÊಯಲ್ಲಿ ಹೊದಿಕೆಯಾಗುತ್ತದೆ.

ಈ ಹೊದಿಕೆಯು ಸಾವಯವ ಪದಾರ್ಥವಾಗಿ ರೂಪಾಂತರಗೊಮಡು ಮಣ್ಣಿನ ತೇವಾಂಶ ಉಳಿಯಲು ಸಹಕರಿಸುತ್ತದೆ. ಮೇಲ್ಮೆöÊ ಹೊದಿಕೆಯು ಕಾಲಾಂತರದಲ್ಲಿ ಜೈವಿಕ ಪ್ರಕ್ರಿಯೆಯಿಂದ ಗೊಬ್ಬರವಾಗಿ ಮಣ್ಣಿನಲ್ಲಿ ಸೇರುತ್ತದೆ. ಈ ಪಿ.ಟಿ.ಓ ಚಾಲಿತ ಯಂತ್ರವನ್ನು 45 ಎಚ್.ಪಿ ಅಥವಾ ಹೆಚ್ಚಿನ ಶಕ್ತಿಯುಳ್ಳ ಟ್ರಾಕ್ಟರ್ ನಿರ್ವಹಿಸುತ್ತದೆ ಹಾಗೂ 1-1.25 ಎಕರೆಯಷ್ಟು ಕ್ಷೇತ್ರವನ್ನು ಪ್ರತಿ ಘಂಟೆಗೆ ಬಿತ್ತನೆ ಮಾಡುತ್ತದೆ. ರೈತರು ರವದೆ/ಬೆಳೆ ಉಳಿಕೆಗಳನ್ನು ಭೂಮಿಯ ಮೇಲೆ ಸುಟ್ಟು ಹಾಕುವುದನ್ನು ಕಡಿಮೆ ಮಾಡಿ, ಈ ಯಂತ್ರವನ್ನು ಬಳಸಿ ಬಿತ್ತನೆ ಮಾಡುವುದರಿಂದ ಮಣ್ಣಿನ ಗುಣಮಟ್ಟವನ್ನು ಸುಧಾರಿಸುವುದಲ್ಲದೆ ಇಂಧನ, ಸಮಯ ಹಾಗೂ ಶಕ್ತಿಯನ್ನು ಉಳಿಸಬಹುದು.

5. ಉಪ-ಮಣ್ಣಿನ ಉಳುಮೆ ಯಂತ್ರ:

ಈ ಉಳುಮೆಯು ಲಂಬ ಬೇಸಾಯದ ಒಂದು ಪ್ರಮುಖ ಅಂಶವಾಗಿದೆ. ಈ ಉಪಕರಣವನ್ನು ಭೂಮಿಯ 30-90 ಸೆಂ.ಮೀ ಆಳದಲ್ಲಿರುವ ಗಟ್ಟಿಯಾದ ಪದರನ್ನು ಸಡಿಲಗೊಳಿಸಲೆಂದೇ ವಿನ್ಯಾಸಗೊಳಿಸಲಾಗಿದೆ. ಕೃಷಿಭೂಮಿಯ ಮೇಲೆ ಆಗಾಗ ರೋಟವೇಟರ್ ಹಾಗೂ ಇತರೇ ಉಳುಮೆ ಯಂತ್ರಗಳನ್ನು ಒಂದೇ ಆಳದಲ್ಲಿ (0-30 ಸೇ.ಮೀ) ಬಳಸುವುದರಿಂದ ನಿರ್ಮಾಣವಾಗುವ ಗಟ್ಟಿಯಾದ ಮಣ್ಣಿನ ಪದರನ್ನು ಸಡಿಲಗೊಳಿಸಿ ಮಣ್ಣಿನ ರಚನೆಯನು ಕಾಪಾಡಲು ಹಾಗೂ ಕೆಳಪದರಿಗೆ ನೀರು ಸರಿಯಾಗಿ ಬಸಿದು ಹೋಗಲು ಈ ಉಳುಮೆ ಯಂತ್ರ ಸಹಕರಿಸುತ್ತದೆ. ಸಾಮಾನ್ಯವಾಗಿ, ಎಮ್. ಬಿ ನೇಗಿಲು ಹಾಗೂ ಇತರೆ ಉಪಕರಣಗಳು 15-20 ಸೆಂ.ಮೀ ಆಳದಲ್ಲಿ ಬೇಸಾಯ ಮಾಡಲು ಸುಕ್ತವಾಗಿವೆ. ಈ ಉಪಕರಣದ ನಿರ್ವಹಣೆಗಾಗಿ 50 ಹೆಚ್.ಪಿ ಶಕ್ತಿಯುಳ್ಳ ಟ್ರಾö್ಯಕ್ಟರ್‌ನ ಅವಶ್ಯಕತೆಯಿದೆ. ಈ ಉಪಕರಣಕ್ಕೆ ಬದಲಾಗಿ ರೆಕ್ಕೆಯುಳ್ಳ ಉಪ ಮಣ್ಣು ಉಳುಮೆ ಸಾಧನವನ್ನೂ ಬಳಸಬಹುದು. ಇದು ಸಾಂಪ್ರದಾಯಕ ಉಳುಮೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಣ್ಣನ್ನು ನಿರ್ವಹಿಸಲು ಸಹಕಾರಿಯಾಗಿದೆ.

Drip irrigation
  1. ಹನಿ ನೀರಾವರಿ ಪದ್ದತಿ (Drip irrigation system):

ಹನಿ ನೀರಾವರಿ ಪದ್ದತಿಯಲ್ಲಿ ಕೊಳವೆಗಳ ಜಾಲವನ್ನು ಬಳಸಿ ಬೆಳೆಗಳಿಗೆ ನೀರನ್ನು ಒದಗಿಸಲಾಗುತ್ತದೆ. ಬೆಳೆ, ಮಣ್ಣಿನ ಪ್ರಕಾರ ಹಾಗೂ ವಾತಾವರಣ ಸ್ಥಿತಿಗೆ ಅನುಗುಣವಾಗಿ ನೀರು ಘಂಟೆಗೆ 2-20 ಲೀ. ಪ್ರಮಾಣದಲ್ಲಿ ಕೊಳವೆಯ ಮೂಲಕ ಮಣ್ಣನ್ನು ಸೇರುತ್ತದೆ. ನೀರನ್ನು ಹೊರಚಿಮ್ಮುವ ಕೊಳವೆಯು ಕಡಿಮೆ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಡ್ರಿಪ್ಪರ್‌ನಿಂದ ಹೊರ ಸೂಸುವ ಹನಿಗಳು ಮಣ್ಣಿನ ತೇವಾಂಶವನ್ನು ಕಾಪಾಡುತ್ತವೆ. ಈ ನೀರಾವರಿ ವ್ಯವಸ್ಥೆಯು ತೋಟಗಾರಿಕೆ, ಬಹುವಾರ್ಷಿಕ ಹಾಗೂ ಅರಣ್ಯ ಬೆಳೆಗಳಿಗೆ ತುಂಬಾ ಸೂಕ್ತವಾಗಿವೆ. ಈ ಪದ್ದತಿಯಲ್ಲಿ ಬೆಳೆಗಳಿಗೆ ಗೊಬ್ಬರವನ್ನು ಒದಗಿಸಬಹುದಾಗಿದೆ. ಹನಿ ನೀರಾವರಿ ಪದ್ದತಿಗೆ ಹೋಲಿಸಿದರೆ, ಈ ಪದ್ದತಿಯಿಂದ ಪ್ರತಿಶತ 70 ರಷ್ಟು ನೀರನ್ನು ಉಳಿಸಬಹುದಾಗಿದೆ. ಅದೇ ರೀತಿ ರಸಗೊಬ್ಬರ ಬಳಕೆಯ ದಕ್ಷತೆಯನ್ನು ಸಹ 30 ಪ್ರತಿಶತದಷ್ಟು ಹೆಚ್ಚಿಸಬಹದಾಗಿದೆ. ಒಟ್ಟಾರೆ ಈ ನೀರಾವರಿ ಪದ್ದತಿಯಿಂದ ಬೆಳೆಗಳ ಉತ್ಪಾದನಾ ವೆಚ್ಚವನ್ನು ಕಡಿತಗೊಳಿಸಬಹುದಾಗಿದೆ.

  1. ತುಂತುರು ನೀರಾವರಿ:

ಈ ಪದ್ದತಿಯು ಮಳೆಯನ್ನು ಅನುಕರಿಸುವುದರಿಂದ ಇದನ್ನು ‘ತುಂತುರು’ ನೀರಾವರಿ ಎಂದು ಕರೆಯಲಾಗುತ್ತದೆ. ಈ ವ್ಯವಸ್ಥೆಯು ಹೆಚ್ಚಿನ ಒತ್ತಡದ ಸಹಾಯದಿಂದ ನೀರನ್ನು ಸಣ್ಣ ವ್ಯಾಸವುಳ್ಳ ನಳಿಕೆಗಳ ಮೂಲಕ ಬೆಳೆಗಳಿಗೆ ಒದಗಿಸುತ್ತದೆ. ಸಾಂಪ್ರದಾಯಕ ಪದ್ದತಿಗೆ ಹೋಲಿಸಿದರೆ, ಈ ಪದ್ದತಿಯಲ್ಲಿ 16-20 ಪ್ರತಿಶತದಷ್ಟು ನೀರನ್ನು ಉಳಿತಾಯ ಮಾಡಬಹುದು. ಇದರಿಂದಾಗಿ, ಪ್ರತಿಶತ 3-57 ರಷ್ಟು ಹೆಚ್ಚಿನ ಇಳುವರಿಯನ್ನು ಪಡೆಯಬಹುದು.

  1. ಅಗಲ ಏರುಮಡಿ ಬಿತ್ತನೆ ಮತ್ತು ಕಾಲುವೆ ನೀರಾವರಿ ಪದ್ದತಿ:

ಅಗಲ ಏರು ಮಡಿ ಮತ್ತು ಕಾಲುವೆ ನಿರಾವರಿ ಕೈಗೊಂಡಾಗ ನೀರು ಅಡ್ಡವಾಗಿ ಮಡಿಗಳ ಒಳಭಾಗಕ್ಕೆ ಕ್ಯಾಪಿಲ್ಲರಿ ಹಾಗೂ ಭೂಮಿಯ ಗುರುತ್ವಾಕರ್ಷಣ ಶಕ್ತಿಯನ್ನಾಧರಿಸಿ ಚಲಿಸಲ್ಪಡುತ್ತದೆ. ಈ ವಿಧಾನವು, ಸುಧಾರಿತ ನೀರಿನ ನಿರ್ವಹಣೆಯನ್ನು ಹೊಂದಿದ್ದು ಅತೀ ಹೆಚ್ಚು ಪರಿಣಾಮಕಾರಿಯಾಗಿದೆ. ಈ ಪದ್ದತಿಯು, ಸಮನಾದ ಕಾಲುವೆ ನೀರಾವರಿಗೆ ಹೋಲಿಸಿದರೆ ಪ್ರತಿಶತ 30 ರಷ್ಟು ಕಡಿಮೆ ನೀರನ್ನು ಬಳಸುತ್ತದೆ ಹಾಗೂ ಪ್ರತಿಶತ 20 ರಷ್ಟು ಇಳುವರಿಯನ್ನು ಹೆಚ್ಚಿಸುತ್ತದೆ. ಮಣ್ಣಿನ ಪದರಗಟ್ಟಿಯಾಗುವಿಕೆಯು ಟ್ರಾಕ್ಟರ್ ಚಲಿಸುವ ಕಾಲುವೆಗಳಿಗೆ ಮಾತ್ರ ಸೀಮಿತವಾಗಿರುತ್ತದೆ.

ಒಟ್ಟಾರೆ, ಈ ಮೇಲಿನ ಪ್ರತಿಯೊಂದೂ ತಂತ್ರಜ್ಞಾನವು ಸುಸ್ಥಿರ ಕೃಷಿಯ ಭವಿಷ್ಯವಾಗಿದ್ದು, ಭೂಮಿ ತಯಾರಿ, ನೀರು, ಮಣ್ಣು ಹಾಗೂ ಕಳೆ ನಿಯಂತ್ರಣವನ್ನು ಸಮರ್ಪಕವಾಗಿ ಕೈಗೊಳ್ಳುವಲ್ಲಿ ಸಹಕರಿಸುತ್ತವೆ. ಈ ತಂತ್ರಜ್ಞಾನಗಳು ಕೃಷಿಯಲ್ಲಿ ತಗಲುವ ವೆಚ್ಚವನ್ನು ಕಡಿಮೆಗೊಳಿಸಿ ಹೆಚ್ಚಿನ ಆದಾಯ ಗಳಿಸುವಲ್ಲಿ ಸಹಾಯಕಾರಿಯಾಗಿವೆ.

ಲೇಖನ: ಶಿದ್ದನಗೌಡ ಯಡಚಿ, ಕೃಷ್ಣ ಕುರುಬೆಟ್ಟ, ಕಿರಣ್ ಎಂ.ಎನ್, ತಿಪ್ಪಣ್ಣ ಕೆ.ಎಸ್, ಶ್ರೀನಿವಾಸ್ ಜಿ. ತೋಟಗಾರಿಕಾ ಅಭಿಯಾಂತ್ರಿಕ ಮತ್ತು ಆಹಾರ ತಂತ್ರಜ್ಞಾನ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿ, ಕರ್ನಾಟಕ

Published On: 19 May 2021, 05:43 PM English Summary: Resource Conservation Machinery

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.